ಅಧ್ಯಾಯ 14: ಗುರೋಪದೇಶ

ಗುರುಗಳು ಚಿದಾನಂದನಲ್ಲಿ ಕೇಳುತ್ತಾರೆ. “ಚಿದಾನಂದ ನಿನಗೆ ಒದಗಿದ ವಿಪತ್ತುಗಳನ್ನೆಲ್ಲಾ ನಾನು ಪರೀಕ್ಷೆಗಾಗಿ ಮಾಡಿದ್ದು ಎಂದು ನಿನಗೆ ಅನಿಸಲಿಲ್ಲವೇ?ಗುರು ವ್ಯಕ್ತಿ ಅಲ್ಲ ಮಹಾನ್ ತತ್ತ್ವ ನಡೆದ ಎಲ್ಲಾ ಲೀಲೆಗಳನ್ನು ಗುರುಶಕ್ತಿಯಿಂದ ಗುರುಗಳೇ ಮಾಡಿದ್ದು ಎಂಬುದು ಅವನಿಗೆ ಅರ್ಥವಾಗಿತ್ತು.”ಮುಂದಿನ ಯೋಗ ಸಾಧನೆಗೆ ಧೈರ್ಯ ನೀಡಿ, ಎದೆ ಗುಂದದ ಹಾಗೆ ತಾವು ನಡೆಸಿದ ಪರೀಕ್ಷೆ ಎಂಬುದು ತಿಳಿದು ಕೊಂಡಿದ್ದೇನೆ” ಚಿದಾನಂದ ಹೇಳಿದಾಗ ಗುರುಗಳು ನಕ್ಕರು.

“ಹೌದು ಚಿದಾನಂದಾ, ಇದೆಲ್ಲಾ ಸತ್ವ ಪರೀಕ್ಷೆ. ಯೋಗ ಸಾಧನೆಗೆ ಮುಂದಕ್ಕೆ ಹಠ ಯೋಗ ಸಾಧನೆಗೆ ವಜ್ರದಂತಹ ಹೃದಯ, ಕಬ್ಬಿಣದಂತಹ ದೇಹ, ಸ್ಥಿರವಾದ ದೃಡ ಭಕ್ತಿ ಅವಶ್ಯ ಅದಕ್ಕಾಗಿ ಪರೀಕ್ಷೆ ನಡೆಸಿದ ಗುರುಗಳು ಹೇಳಿದರು. ನೀನು ಎಲ್ಲಾ ಪರೀಕ್ಷೆಗಳಲ್ಲಿ ತೇರ್ಗಡೆಯಾಗಿರುವೆ, ಎನ್ನುತ್ತಾ ನದಿಯ ದಡದ ಬಳಿ ಕರೆದುಕೊಂಡು ಹೋದರು. ಗುರು ಸೇವೆ ಹಾಗೂ ಸಂಚಾರದಿಂದ ನಿನ್ನ ಕೃತಿ ರಚನೆಯ ಕಾರ್ಯ ಕುಂಟುತ್ತಾ ಸಾಗಿದೆ. ನಿನಗೆ ಎಲ್ಲಾ ಯೋಗ ಶಾಸ್ತ್ರಗಳ ಸಂಚಾರದ ಅನುಭವ ಹಾಗೂ ಗ್ರಂಥಗಳ ಅಭ್ಯಾಸವಾಗಿದೆ. ಇನ್ನೂ ಆಗಬೇಕು. ಮುಂದೆ ನೀನು ಮಹಾನ್ ಗ್ರಂಥ ಹಾಗೂ ಕೃತಿ ರಚಿಸಬೇಕಾಗಿದೆ. ಅದು ಮುಂದಿನ ಜನಾಂಗಕ್ಕೆ, ಬ್ರಹ್ಮ ಜಿಜ್ಞಾಸುಗಳಿಗೆ ಕಾಮಧೇನು ಕಲ್ಪವೃಕ್ಷಗಳಾಗಿ ಧರ್ಮ ರಕ್ಷಣೆಗೆ ನಿಲ್ಲಬೇಕು. ನೀನು ರಚಿಸುವ ಪ್ರತಿಯೊಂದು ಕೃತಿಯ ಅಕ್ಷರ ಅಕ್ಷರಗಳಲ್ಲಿ “ರಾಜರಾಜೇಶ್ವರಿ” ನೆಲೆಸಿರುತ್ತಾಳೆ. ಇದು ಸತ್ಯ ಎನ್ನುತ್ತಾರೆ.

ಒಂದು ಆಶ್ರಮದ ಬಳಿಗೆ ಬಂದು ಚಿದಾನಂದ ಈ ಆಶ್ರಮ ಕಪಿಲಾಶ್ರಮ ಎನ್ನುತ್ತಾರೆ.ಇಬ್ಬರೂ ನದಿಯಲ್ಲಿ ಸ್ನಾನ ಮಾಡುತ್ತಾರೆ. ಬಳಿಕ ಗುರುಗಳು ಬಂಡೆ ಕಲ್ಲಿನ ಮೇಲೆ ಪದ್ಮಾಸನ ಹಾಕಿ ಕುಳಿತು ಕೊಳ್ಳುತ್ತಾರೆ. ಬಲಭಾಗದಲ್ಲಿ ಚಿದಾನಂದನನ್ನು ಕುಳ್ಳಿರಿಸಿ ಪ್ರಸನ್ನರಾದ ಗುರುಗಳು ತನ್ನ ಪರಮ ಪವಿತ್ರವಾದ ವರದಹಸ್ತವನ್ನು ಅವನ ಶಿರದ ಮೇಲಿಟ್ಟು, “ಈಗ ನೀನು ನಿನ್ನಲ್ಲಿರುವ ನಿನ್ನರಿವನ್ನುಂಟು ಮಾಡಿಕೊಳ್ಳುಬೇಕು. ನಾನು ಹೇಳಿದಂತೆ ನಿನ್ನ ಅರಿವೇ ನಿನಗೆ ಗುರು ಎಂಬುದನ್ನು ಇಂದಿನಿಂದ ಬಲವಾಗಿ ನಂಬಬೇಕು. ಕೇವಲ ಗುರು ಉಪದೇಶವಾದರೆ ಮುಕ್ತಿಯಾಗುವುದಿಲ್ಲಾ, ಶಿಷ್ಯನು ಉಪದೇಶಕ್ಕೆ ಅನುಗುಣವಾಗಿ ತನ್ನ ಶೀಲ ಚಾರಿತ್ರ್ಯವನ್ನು ಕಾಪಾಡಿಕೊಳ್ಳಬೇಕು” ಎಂದು ಅತ್ಯಂತ ರಹಸ್ಯವಾದ ಮಂತ್ರೋಪದೇಶ ಮಾಡಿದರು.

ತಕ್ಷಣ ಚಿದಾನಂದನ ಅಂತರಂಗದಲ್ಲಿ ಒಂದು ಬಗೆಯ ದಿವ್ಯ ತೇಜಸ್ಸು ಒಡ ಮೂಡಿತು. ಪರಮಾನಂದ ಪ್ರಾಪ್ತವಾಯಿತು. ಭಯ ಭಕ್ತಿಯಿಂದ ಗುರುಗಳಗೆ ವಂದಿಸಿದನು.ಗುರುಗಳು ಚಿದಾನಂದಾ, ಬ್ರಹ್ಮ ವಿದ್ಯೆ ಎಲ್ಲರಿಗೂ ಅಲ್ಲಾ ಸದ್ಗುರುವಿನ ಅನುಗ್ರಹಕ್ಕೆ ಪಾತ್ರನಾದ ಶಿಷ್ಯನು ನಮ್ರತನ, ಅಂತಃಕರಣ ಅದ್ವೈತ ಸಿದ್ದಾಂತದಲ್ಲಿ ನಿಷ್ಠೆ ಇದ್ದು, ವೈರಾಗ್ಯ ಶೀಲತೆ, ನಿಷ್ಕಾಮ ಭಕ್ತಿಯಿಂದ ಆತ್ಮ ಜ್ಞಾನದ ವಿಚಾರದಲ್ಲಿ ವಿಚಾರಾತ್ಮಕ ಬುದ್ದಿ ಬ್ರಹ್ಮ ವಿದ್ಯೆಯ ಬಗ್ಗೆ ಅಷ್ಟೇ ಜಿಜ್ಞಾಸೆಯನ್ನು ಹೊಂದಿರಬೇಕು. ಅಂತರೇಂದ್ರಿಯ ಹಾಗು ಬಹಿರೇಂದ್ರಿಯಗಳ ನಿಗ್ರಹಕ್ಕೆ ಬ್ರಹ್ಮ ಜ್ಞಾನದಿಂದ ನೀನೆ ಅರಿತುಕೊಂಡ ಪರಮ ಸತ್ಯ, ಪುಣ್ಯ ಸದಾಚಾರಗಳನ್ನು ಪಡೆಯುವನಂತಾಗು.ಚಿದಾನಂದಾ, ಸಂಸಾರ ದುಃಖದ ಆತಂಕವು ಅಡಗದೇ ಮುಕ್ತಿ ದೇವಿಯು ಪ್ರಸನ್ನಳಾಗುವುದಿಲ್ಲಾ, ಸತ್ವ, ರಜ, ತಮೋಗುಣಗೊಳಗಾಗಿ ಶೋಭಿಸದೇ ಪುಣ್ಯದ ಕೈ ಚಳಕತನ ವೆಸಗದೆ ಸುವಿಚಾರ ಸಂಜ್ಞೆಗೂಡಿ ನೋಡದೇ ಬಂದುರವಾದ ಕಟ್ಟಳೆಯನ್ನು ಕಡಿಯದೇ ಮುಕ್ತಿ ದೇವಿ ಒಲಿಯುವುದಿಲ್ಲಾ.ಅಹಂಕಾರದ ಸಾವಿಲ್ಲದೆ ಸ್ವರ್ಗವಿಲ್ಲಾ, ನಿನ್ನಲ್ಲಿರುವ ಅಹಂಕಾರ ಎಂಬ ಉಪಾದಿಯನ್ನು ತಲೆ ಎತ್ತದಂತೆ ನೋಡಿಕೊಳ್ಳಬೇಕು. ಯಾವ ಅಹಂಕಾರವು ಕಿರಿದಾಗುತ್ತಾ ಗೋಚರವಾಗುವುದು. ನಿನ್ನ ಶರೀರದಲ್ಲಿಯೂ ಸೂರ್ಯ ಚಂದ್ರಾದಿಗಳಲ್ಲಿರುವ ನಿರ್ಮಲ ಪ್ರಕಾಶ ಹೊಳೆಯುವುದು ಸುರಾಸುರ, ನರೋರುಗ, ಮುನಿಕುಲ, ಪರಮಾಣು ಸಕಲ ಚರಾಚರಾ ವಸ್ತು ಮೊದಲಾದವುಗಳಿಗೆ ನೀನು ಅತೀತನಾದವನು. ಮನ, ಬುದ್ದಿ ಚಿತ್ತ, ಅಹಂಕಾರ ಮೊದಲಾವುಗಳಿಗೆ ನೀನೆ ಸಾಕ್ಷಿ ರೂಪನು. ನೀನು ಶುದ್ದ ಸಚ್ಚಿದಾನಂದ ಸ್ವರೂಪನು, ನೀನು ಹಠಯೋಗ, ರಾಜಯೋಗಗಳನ್ನು ಸಂಧಿಸಿ ಬ್ರಹ್ಮ ಜ್ಞಾನಕ್ಕೆ ಸಹಾಯಕವಾದ ಏಕಾಗ್ರತೆಯನ್ನು ರೂಡಿಕರಿಸಿ ಪೀಪಿಲಿಕಾ ಮತ್ತು ವಿಹಂಗಮ ಅರ್ಥಗಳನ್ನು ಅನುಸರಿಸಿ ಬ್ರಹ್ಮ ಜ್ಞಾನದ ತಿರುಳನ್ನು ಅರ್ಥ ಮಾಡಿಕೊಂಡು ಪರಬ್ರಹ್ಮನಾಗಿ ಬಾಳಬೇಕು. ಸಿದ್ದ ಮಹಾಯೋಗ ಬಲದಿಂದ ಯೋಗಿ, ಭೋಗಿ, ತ್ಯಾಗಿ, ಜೋಗಿ ಸರ್ವ ವಿಶ್ವ ರೂಪಿಯೂ ತಾನಾಗಿದ್ದೇನೆಂದು ತಿಳಿದು ಸಿದ್ದ ಪುರುಷನಾಗು ಎಂದು ಆಶೀರ್ವದಿಸಿದರು. ಕಲಿಯುಗದಲ್ಲಿ ಗುರು ಸೇವೆಗಿಂತ ದೊಡ್ಡ ತಪವಿಲ್ಲಾ ಗುರು ಸಾಕ್ಷಾತ್ ಪರಬ್ರಹ್ಮ ಸ್ವರೂಪನು ಗುರುಸೇವೆಯಿಂದ ನಿನಗೆಲ್ಲವೂ ಪ್ರಾಪ್ತವಾಗಿದೆ.ಚಿದಾನಂದಾ ಗುರು ಬೇರೆ, ದೇವಿ ಬೇರೆಯಲ್ಲಾ ಶ್ರೀ ದೇವಿಯು ಸಾಕ್ಷಾತ್ ಪರಬ್ರಹ್ಮ ಸ್ವರೂಪವುಳ್ಳ ಸದ್ಗುರುನಾಥನ ರೂಪವೆಂದೇ ತಿಳಿಯಬೇಕು ಗುರುವಾಜ್ಞೆಗೂ, ಶ್ರೀ ದೇವಿಯ ಆಜ್ಞೆಗೂ ಭೇದವನ್ನು ಕಲ್ಪಿಸಬೇಡಾ.

ಭಗಳಾ ಮುಖಿಯೇ ನಾನು ಎಂಬ ತಾದಾತ್ಮಭಾವದಿಂದ ನೀನು ಮಹಾಮಂತ್ರ ಪಠಿಸು ಎಂದರು. ಮನದ ಸಂಶಯ ದೂರವಾಯಿತು ಇಡೀ ದೇಹ ಚಿದಾನಂದನದ್ದು ಹಗುರುವಾಯಿತು ಗಾಳಿಯಲ್ಲಿ ತೆಲುತ್ತಿರುವಂತೆ ಅನುಭವ, ಆನಂದ, ಪರಮಾನಂದ, ನಿತ್ಯಾನಂದ, ಬ್ರಹ್ಮಾನಂದ ಹೇಳಲಾಗದ, ವರ್ಣಿಸಲಾಗದ ಅನುಭವಾಮೃತ.ಪ್ರೇಮದಿಂದ ಗುರುಗಳು ಚಿದಾನಂದನನ್ನು ಅಪ್ಪಿಕೊಂಡರು ಅದೊಂದು ಅಪೂರ್ವ ಸಂಗಮವಾಗಿತ್ತು. ಎರಡು ಚಿತ್ ಶಕ್ತಿಗಳು ಒಂದೆಡೆ ಕೂಡಿದ ಅನುಭವ. “ನ ಗುರುಂ ನ ಶಿಷ್ಯಂ ಶಿವೋಹಂ ಶಿವೋಹಂ”ಅದೆಷ್ಟೋ ಪ್ರವಾಹಗಳನ್ನು ಕೂಡಿಕೊಂಡ ಮಹಾನದಿ ಇನ್ನೊಂದು ಮಹಾ ನದಿಯನ್ನು ಕೂಡಿ ಕೊಂಡಿತು.(ಮುಂದುವರಿಯುವುದು)ಸಂಗ್ರಹ ಸ್ವಾಮಿ ವಿಜಯಾನಂದರು,ಮೂಲ ಕೃತಿ S.V. ಪಾಟೀಲ ಗುಂಡೂರ ಅವರ “ರಾಜಯೋಗಿ ಶ್ರೀ ಚಿದಾನಂದ ಅವಧೂತರು”. ಸಂಕಲನ:ಸಿದ್ಧಾರೂಢ ಹಿರೇಮಠ, ನಿತ್ಯಾನಂದ ಧ್ಯಾನ ಮಂದಿರ, ಬೇವಿನಕೊಪ್ಪ.

Share it with the world ~