ನಿತ್ಯ ಪ್ರಾರ್ಥನೆ

ಓ ಭಗವಾನ್ ನಿತ್ಯಾನಂದ,

ಇಂದಿನ ದಿನವನ್ನು ನೀನು ನನಗೆ ಕರುಣಿಸಿರುವೆ, ನಿನ್ನ ಪ್ರಾರ್ಥನೆಯೊಂದಿಗೆ ದಿನವನ್ನು ಪ್ರಾರಂಭಿಸುತ್ತಿದ್ದೇನೆ, ನೀನೇ ಅನುಗ್ರಹಿಸಿದ ಈ ಶರೀರಕ್ಕೆ ಆಯುರಾರೋಗ್ಯ ನೀಡು, ವಿದ್ಯಾ ಬುದ್ಧಿಯನ್ನು ನೀಡು. ನನ್ನ ತಲೆಯಲ್ಲಿ ಒಳ್ಳೆಯ ವಿಚಾರ ಮಾತ್ರ ಬರುವಂತೆ ಮಾಡು, ನನ್ನ ಬಾಯಿಯಿಂದ ಒಳ್ಳೆಯ ಮಾತುಗಳು ಬರುವಂತೆ ಮಾಡು. ಎಲ್ಲೆಲ್ಲೂ ಇರುವ, ಎಲ್ಲರೊಳಗಿರುವ ನಿನ್ನನ್ನು ಗುರುತಿಸುವ ಶಕ್ತಿಯನ್ನು ನನ್ನ ಕಣ್ಣುಗಳಿಗೆ ನೀಡು, ನನ್ನ ಕಿವಿಯು ಒಳ್ಳೆಯ ವಿಚಾರಗಳನ್ನು ಕೇಳುವಂತಾಗಲಿ. ನೀನು ಅನುಗ್ರಹಿಸಿದ ಈ ಶರೀರದಿಂದ ಒಳ್ಳೆಯ ಕಾರ್ಯಗಳನ್ನು ಮಾಡಿ, ನಿನ್ನ ತತ್ವದಂತೆ ಜೀವಿಸುವ ಶಕ್ತಿಯನ್ನು ನನಗೆ ದಯಪಾಲಿಸು. ನನಗೆ ಬದಲಿಸಲು ಅಸಾಧ್ಯವಾದ ಸಂಗತಿಗಳನ್ನು ಬದಲಾಯಿಸಲು ಶಕ್ತಿ ನಿಡು. ನನ್ನ ಮನಸ್ಸು ಯಾವುದೇ ಕೆಟ್ಟ ವಿಚಾರವನ್ನು ಹೊಂದದಂತೆ ಮಾಡಿ, ಕೆಟ್ಟವರಿಂದ ದೂರವಿರುವ ಶಕ್ತಿಯನ್ನು, ಉತ್ತಮ ವ್ಯಕ್ತಿಗಳ ಸಂಗವು ನನಗೆ ದೊರಕುವಂತೆ ಮಾಡು. ಕಷ್ಟ ಬಂದಾಗ ಕುಗ್ಗದಂತೆ, ಸುಖ ಬಂದಾಗ ಹಿಗ್ಗದಂತೆ, ಇದ್ದದ್ದನ್ನು ಇದ್ದಂತೆ, ಬಂದದ್ದನ್ನು ಬಂದಂತೆ ಸ್ವೀಕರಿಸುವ  ಸಹನಾ ಶಕ್ತಿಯನ್ನು ನೀಡು.

ನನ್ನ ತಂದೆ ತಾಯಿ, ಬಂಧು ಬಳಗ, ಗುರುದೇವ, ಸಖ , ರಕ್ಷಕ ಎಲ್ಲವೂ ನೀನೇ ನಿತ್ಯಾನಂದ. ನಿನ್ನ ಕೃಪಾಶೀರ್ವಾದದಿಂದ ದುರ್ಜನರು ಸಜ್ಜನರಾಗಿ, ಸಜ್ಜನರು ಸುಖ, ಶಾಂತಿ, ನೆಮ್ಮದಿಯನ್ನು ಹೊಂದಲಿ. ಗುರುದೇವ, ನೀನು ಪ್ರಕೃತಿಯಲ್ಲಿ ತುಂಬಿರುವ ಗುರು ಶಕ್ತಿಯನ್ನು ಗುರುತಿಸುವ  ಶಕ್ತಿಯನ್ನು ನನಗೆ ದಯಪಾಲಿಸು. ಗುರು ಶಕ್ತಿಯು ನಮ್ಮೆಲ್ಲರನ್ನೂ ಸನ್ಮಾರ್ಗದಲ್ಲಿ ನಡೆಸುವಂತೆ ಅನುಗ್ರಹಿಸು, ನಿನ್ನ ಕೃಪಾಶೀರ್ವಾದವನ್ನು ಎಲ್ಲರಿಗೂ ದಯಪಾಲಿಸು. ನಿನ್ನನ್ನು ಅರಿಯಲು ಸಾಧನಾಮಾರ್ಗದಲ್ಲಿ ಕೈಹಿಡಿದು ಮುನ್ನಡೆಸು. ಎಲ್ಲವೂ ನೀನೇ, ಎಲ್ಲವೂ ನಿನ್ನಿಂದಲೇ, ಎಲ್ಲವೂ ನಿನಗೆ.

🙏 ನಮೋ ನಿತ್ಯಾನಂದ 🙏

ಶುದ್ಧ ಭಾವನೆ, ನಿರ್ಮಲ ಮನಸ್ಸು, ನಿಶ್ಚಲ ಮನದಿಂದಷ್ಟೇ ಭಗವಂತನ ಕೃಪಾಶೀರ್ವಾದ ಪಡೆಯಲು ಸಾಧ್ಯ, ಆಡಂಬರದ ಹೊದಿಕೆ, ಯಾಗ ಯಜ್ಞ ಅನಗತ್ಯ.

–ಭಗವಾನ್ ಶ್ರೀ ನಿತ್ಯಾನಂದ

Share it with the world ~